ರ೦ಗನತಿಟ್ಟು ಪಕ್ಷಿಧಾಮ ( ) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. . ರ೦ಗನತಿಟ್ಟು ಚರಿತ್ರಾರ್ಹ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು. == ಪಕ್ಷಿಧಾಮದ ಇತಿಹಾಸ == ಕರ್ನಾಟಕದಲ್ಲಿನ ಪ್ರಥಮ ರಾಮ್ಸರ್ ಜೌಗುತಾಣವಾಗಿ ರಂಗನತಿಟ್ಟು ಪಕ್ಷಿಧಾಮವನ್ನು 2022 ರಲ್ಲಿ ಘೋಷಿಸಲಾಗಿದೆ.. 1971ರಲ್ಲಿ ಇರಾನಿನ ರಾಮ್ಸರ್ ನಲ್ಲಿ ನಡೆದ ಜೌಗುತಾಣ-ಹಕ್ಕಿಗಳ ಕುರಿತ ಪ್ರಪ್ರಥಮ ಅಧಿವೇಶನದಲ್ಲಿ ಸಲೀಂ ಆಲಿಯವರು ಭಾರತವನ್ನು ಪ್ರತಿನಿಧಿಸಿದ್ದರು. 1940ರಲ್ಲಿ ರಂಗನತಿಟ್ಟು ಪಕ್ಷಿಧಾಮವಾಗಲು ಕಾರಣಕರ್ತರಾದ ಸಲೀಂ ಆಲಿಯವರ 125ನೇ ಹುಟ್ಟಿದ ವರುಷ ರಾಮ್ಸರ್ ಜೌಗುತಾಣವಾಗಿರುವುದು ಸಂತಸದ ವಿಷಯ. 1648 ರಲ್ಲಿ ಆಗಿನ ಮೈಸೂರು ಸ೦ಸ್ಥಾನದ ಅರಸರಾದ ಕ೦ಠೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು. 1940ರಲ್ಲಿ ಪಕ್ಷಿತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವುದನ್ನು, ೧೯೩೯-೪೦ರ ಅವಧಿಯ ಮೈಸೂರು ಸಂಸ್ಥಾನದ ಹಕ್ಕಿಗಳ ಅಧ್ಯಯನದ ಸಮಯದಲ್ಲಿ ಗಮನಿಸಿ, ಮಹಾರಾಜರನ್ನು ಈ ದ್ವೀಪ ಸಮೂಹಗಳನ್ನು ಪಕ್ಷಿಧಾಮವೆ೦ದು ಘೋಷಿಸಲು ಮನವೊಲಿಸಿದರು. ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯು ಈ ಪಕ್ಷಿಧಾಮದ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದೆಯಲ್ಲದೆ, ಇತ್ತೀಚೆಗೆ ಪಕ್ಷಿಧಾಮವನ್ನು ವಿಸ್ತರಿಸಿ, ರಕ್ಷಿಸುತ್ತಿದೆ. 2014 ರಲ್ಲಿ ಪಕ್ಷಿಧಾಮದ ಸುತ್ತಲಿನ ಸುಮಾರು 28 ಚ.ಕಿ.ಮೀ. ಪ್ರದೇಶವನ್ನು ಪರಿಸರ-ಸೂಕ್ಷ್ಮ ಪ್ರದೇಶವನ್ನಾಗಿ ಆದೇಶ ಹೊರಡಿಸಿದ್ದು, ಸರಕಾರದ ಪರವಾನಗಿ ಇಲ್ಲದೆ ಹಲವು ವಾಣಿಜ್ಯ ಚಟುವಟಿಕೆಗಳನ್ನು ಈ ಪ್ರದೇಶದಲ್ಲಿ ನಡೆಸಲು ನಿಷೇಧಿಸಿದೆ. === ಪ್ರವಾಹ === ಮಳೆಗಾಲದಲ್ಲಿ, ಹತ್ತಿರದ ಕೃಷ್ಣರಾಜಸಾಗರ ಅಣೆಕಟ್ಟಿನಿ೦ದ ಅಧಿಕ ನೀರನ್ನು ಹೊರಬಿಟ್ಟಾಗ ಈ ದ್ವೀಪಸಮೂಹಗಳಿಗೆ ಪ್ರವಾಹದ ಭೀತಿಯಿರುತ್ತದೆ. ಪ್ರವಾಹವಿದ್ದಾಗ ಪಕ್ಷಿಧಾಮಕ್ಕೆ ಪ್ರವೇಶವಿರುವುದಿಲ್ಲ, ಹಾಗೂ ದೋಣಿಗಳ ಓಡಾಟವನ್ನು ನಿಷೇಧಿಸ ಲಾಗುತ್ತದೆ. ಅತಿ ಪ್ರವಾಹವಿಲ್ಲದಾಗ, ಕೇವಲ ದೂರದಿ೦ದಲೇ ಪಕ್ಷಿಗಳ ವಂಶಾಭಿವೃದ್ಧಿ ಚಟುವಟಿಕೆಯನ್ನು ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲ ದಶಕಗಳಲ್ಲಿ ಆಗಾಗ ಉ೦ಟಾದ ಪ್ರವಾಹಗಳಿ೦ದಾಗಿ ದ್ವೀಪಗಳ ಕೆಲಭಾಗಗಳಿಗೆ ಧಕ್ಕೆಯಾಗುತ್ತದೆ. == ಪಕ್ಷಿಧಾಮದ ನೈಸರ್ಗಿಕ ಇತಿಹಾಸ == === ಭೂಗೋಳ ಹಾಗು ಪರಿಸರ === ಈ ಪಕ್ಷಿಧಾಮದ ನೈಸರ್ಗಿಕ ನೆಲೆಯನ್ನು 'ನದಿ ಪಾತ್ರದ ಕಾಡುಗಳು' ( : ) ಎಂದು ವರ್ಗಿಕರಿಸಲಾಗಿದೆ. ನದಿಯ ಪಾತ್ರದ ಸುತ್ತ ಬೆಳೆಯುವ ಕಾಡಿಗೆ ನದಿ ಪಾತ್ರದ ಕಾಡುಗಳೆನ್ನುತ್ತಾರೆ. ಎಲೆಯುದುರು ಮತ್ತು ನಿತ್ಯ ಹರಿದ್ವರ್ಣದ ಮರಗಳನ್ನು ಇಲ್ಲಿ ಕಾಣಬಹುದು. ವರ್ಷಾಕಾಲ ನೀರು ಹರಿಯುವುದರಿಂದ ತೇವಾಂಶ ಸದಾಕಾಲ ಹೆಚ್ಚಿರುತ್ತದೆ ಮತ್ತು ಹಸುರಿನಿಂದ ಕಂಗೊಳಿಸುತ್ತಿರುತ್ತದೆ. === ಸಸ್ಯ ಸಂಪತ್ತು === ದ್ವೀಪಗಳ ನದೀ ತೀರದಲ್ಲಿ ಜೊಂಡು ಸಸ್ಯಗಳು ಆವೃತವಾಗಿವೆ. ದ್ವೀಪದ ಒಳಗೆ ಅಗಲವಾದ ಎಲೆಗಳ ಜಾತಿಯ ಸಸ್ಯಗಳು, ಹೊಳೆಮತ್ತಿ-ಮರಗಳು ( ಟೆರ್ಮಿನೇಲಿಯಾ ), ಬಿದುರು ಮೆಳೆಗಳು ಮತ್ತು ಕೇದಗೆ ಪೊದೆಗಳಿವೆ. ಮೂಲ ಜಾತಿಯ ಮರಗಳಲ್ಲದೆ ನೀಲಗಿರಿ ಮತ್ತು ಜಾಲಿಯಂತಹ ಸಸಿಗಳನ್ನು ನಾಲ್ಕೈದು ದಶಕಗಳ ಹಿಂದೆ ನೆಡಲಾಗಿದ್ದು, ಇವು ಇದೇ ಪ್ರದೇಶದ ಮೂಲ ಜಾತಿಯ ಸಸ್ಯಗಳ ಅವನತಿಗೆ ದಾರಿಮಾಡಿಕೊಡಬಹುದಾಗಿದೆ, ಆದ್ದರಿಂದ ಇತ್ತೀಚೆಗೆ ವಿಸ್ತರಿಸಿದ ಪ್ರದೇಶದಲ್ಲಿ ಸ್ಥಳೀಯ ಮರಗಳಿಗೆ ಪಾಶಸ್ತ್ಯ ನೀಡಲಾಗಿದೆ. ಅಪರೂಪದ ಇಫಿಗ್ನಿಯ ಮೈಸೂರೆನ್ಸಿಸ್ (: ) ಜಾತಿಯ ಅತಿಸಣ್ಣ ಸಸ್ಯಗಳು ಈ ಅಭಯಧಾಮದಲ್ಲಿ ಬೆಳೆಯುತ್ತವೆ. == ಹಕ್ಕಿಗಳು == ಹಲವು ವರ್ಷಗಳ ದಾಖಲೆಯ ಪ್ರಕಾರ ಸುಮಾರು 170 ಕ್ಕೂ ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ಕಂಡುಬಂದಿವೆ. ಹೆಜ್ಜಾರ್ಲೆ(:- ), ಬಣ್ಣದ ಕೊಕ್ಕರೆ (: ), ಚಮಚದ ಕೊಕ್ಕು ( : ), ಬಿಳಿ ಕೆಂಬರಲು ( :- ), ಶಿಳ್ಳೆ ಬಾತು ( : ), ಉದ್ದ ಕೊಕ್ಕಿನ ನೀರುಕಾಗೆ ( : ), ಹೆಮ್ಮಿಂಚುಳ್ಳಿ (:- ) ನಂತಹ ವಿಶೇಷ ಪಕ್ಷಿಗಳು ಮತ್ತು ಬೆಳ್ಳಕ್ಕಿ (:) ನೀರುಕಾಗೆ (:), ಹಾವಕ್ಕಿ (: ), ಬಕ ಪಕ್ಷಿಗಳು (:) ಈ ಪ್ರದೇಶದಲ್ಲಿ ಗೂಡು ಕಟ್ಟಿ ಮರಿಮಾಡಿ ಪೋಷಿಸುತ್ತವೆ. ಅಲ್ಲದೆ, ದೊಡ್ಡ ಬಂಡೆಗೊರವ(: - ), ನದಿರೀವ(: ), ಗೀರುಗತ್ತಿನ ಕವಲು ತೋಕೆ (:- )ಗಳಿಗೆ ಈ ಪಕ್ಷಿಧಾಮ ವಂಶಾಭಿವೃದ್ಧಿ ಮತ್ತು ವರ್ಷವಿಡೀ ಆಹಾರದ ನೆಲೆಯಾಗಿದೆ.ಇತ್ತೀಚೆಗಷ್ಟೇ, ಬಣ್ಣದ ಕೊಕ್ಕರೆ ೧೯೯೬-೯೭ರ ನಂತರ, ಹೆಜ್ಜಾರ್ಲೆಗಳು ೨೦೦೯-೧೦ರ ನಂತರ ರಂಗನತಿಟ್ಟು ಪಕ್ಷಿಧಾಮವನ್ನು ವಂಶಾಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಲು ಆರಂಭಿಸಿವೆ. ಒಟ್ಟು ದಾಖಲಾದ ಹಕ್ಕಿಗಳ ವೈವಿಧ್ಯತೆ ೨೦೦ಕ್ಕೂ ಹೆಚ್ಚಿವೆ == ಚಟುವಟಿಕೆಗಳು == ದಿನಪೂರ್ತಿ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ದ್ವೀಪಗಳಲ್ಲಿ ದೋಣಿ ಪ್ರವಾಸಗಳು ನಡೆಯುತ್ತವೆ. ಈ ಪ್ರವಾಸದಲ್ಲಿ ಪಕ್ಷಿಗಳನ್ನು, ಮೊಸಳೆಗಳನ್ನು, ನೀರು ನಾಯಿಗಳನ್ನು ಮತ್ತು ಬಾವಲಿಗಳನ್ನು ವೀಕ್ಷಿಸಬಹುದಾಗಿದೆ. ಈ ಚಿಕ್ಕ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯವಿರುವುದಿಲ್ಲ. ಪ್ರವಾಸಿಗರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಜೂನ್ ನಿಂದ ನವೆಂಬರ ಇಲ್ಲಿ ಹಲವು ಪಕ್ಷಿಗಳು ಸಂತಾನ ಅಭಿವೃರಿದ್ಧಿ ಪ್ರಕ್ರಿಯೆಯಲ್ಲಿ ತೊಡಗುವ ಕಾರಣ ಈ ಉದ್ಯಾನವನ್ನು ಸಂದರ್ಶಿಸಲು ಸೂಕ್ತ ಕಾಲ ವಾಗಿದೆ. ವಲಸೆ ಬರುವ ಪಕ್ಷಿಗಳನ್ನು ವೀಕ್ಷಿಸಲು ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಸೂಕ್ತವಾಗಿದೆ. ಆದರೂ ಈ ಅವಧಿ ವರ್ಷದಿಂದ ವರ್ಷಕ್ಕೆ ಬದಲಾಗಬಹುದಾಗಿದೆ. ಸಂದರ್ಶನದ ಅವಧಿ ಬೆಳಗ್ಗೆ 8:30 ರಿಂದ ಸಂಜೆ 5:45 ರವರೆಗೆ. ಭಾರತೀಯರಿಗೆ ಪ್ರವೇಶ ಶುಲ್ಕ ರೂ 70.00 ಮತ್ತು ವಿದೇಶಿಯರಿಗೆ ರೂ 400.00 ಆಗಿದೆ. ವಿಶೇಷ ಆಸಕ್ತ ತಂಡಗಳಿಗೆ ಅರಣ್ಯ ಇಲಾಖೆಯ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಸಲೀಂ ಆಲಿ ಅನುವಾದಕ ಕೇಂದ್ರದಲ್ಲಿ 45 ನಿಮಿಷಗಳ ಕಾಲದ ಮಾಹಿತಿ ಚಿತ್ರ ಪ್ರದರ್ಶನದ ವೀಕ್ಷಣಾ ಸೌಲಭ್ಯವಿದೆ. == ಮೂಲಗಳು == == ಬಾಹ್ಯ ಕೊಂಡಿಗಳು == 2007-12-31 ವೇಬ್ಯಾಕ್ ಮೆಷಿನ್ ನಲ್ಲಿ. - 2012-06-17 ವೇಬ್ಯಾಕ್ ಮೆಷಿನ್ ನಲ್ಲಿ.